ಕನ್ನಡಾನುವಾದ: ಡಾ. ಎನ್ಎಸ್ ಲಕ್ಷ್ಮೀನಾರಾಯಣ ಭಟ್ಟ
ಪ್ರಸ್ತುತ ನಾಟಕ ವಿಲಿಯಂ ಷೇಕ್ಸ್ಪಿಯರ್ನ ವಿಶಿಷ್ಟ ನಾಟಕವಾಗಿದೆ. ಹಾಸ್ಯಭರಿತ ಪ್ರೇಮಕಥನ ಇದರ ವೈಶಿಷ್ಟ್ಯ, ಇಲಿರಿಯಾದ ಜನ ಜೀವನದ ಹಾಗೂ ಇಂಗ್ಲೆಂಡ್ನ ರೆನೇಜಾನ್ಸ್ ಸಂಪ್ರದಾಯಕ್ಕೆ ಹೊಂದುವ ಪ್ರೇಮಕಥೆಯನ್ನು ಹಾಗೂ ವಾಸ್ತವದ ಗಟ್ಟಿನೆಲದಲ್ಲಿ ಜರ ಗುವ ನೈಜಕಥೆಯನ್ನು ಒಳಗೊಂಡಿದೆ.
ತದ್ರೂಪಿ ಅವಳಿ ಮಕ್ಕಳಾದ ವಯೋಲ ಮತ್ತು ಸೆಬಾಸ್ಟಯನ್ ಹಾಗೂ ಆರ್ಸಿನೋ ಮತ್ತು ಒಲಿವಿಯಾ ಪಾತ್ರಗಳು ಮುಖ್ಯ ಭೂಮಿಕೆಯಲ್ಲಿದ್ದು, ಸರ್ ಟೋಬಿ, ಮರೀಯ, ಅಂದ್ರೂ ಅಗ್ಚೀಕ್ ಮಾಲ್ಗೊಲೆಯೊ ಮುಂತಾದ ಪಾತ್ರಗಳು ನಾಟಕಕ್ಕೆ ಒತ್ತಾಸೆಯಾಗಿ ನಿಂತಿವೆ. ಇಲಿರಿಯಾ ಕರಾವಳಿಯಲ್ಲಿ ಹಡಗು ಧ್ವಂಸಗೊಂಡ ನಂತರ ತನ್ನ ಅಣ್ಣನನ್ನು ಕಳೆದುಕೊಂಡೆ ಎಂದು ಭ್ರಮಿಸುವ ವಯೋಲಾ ಆರ್ಸಿನೋ ಬಳಿ ಪುರುಷ ಸೇವಕನ ವೇಷ ಧರಿಸಿ ಕೆಲಸಕ್ಕೆ ಸೇರುತ್ತಾಳೆ. ಆರ್ಸಿನೋ ಒಲಿವಿಯಾಳಲ್ಲಿ ಅನುರಕ್ತನಾದರೆ, ಒಲಿವಿಯಾ ಪುರುಷ ರೂಪದಲ್ಲಿದ್ದ ವಯೋಲಾಳನ್ನು ಮೋಹಿಸುತ್ತಾಳೆ. ಆದರೆ ವಯೋಗಳಿಗೆ ಆರ್ಸಿನೋ ಮೇಲೆ ಪ್ರೇಮಾಂಕುರವಾಗುತ್ತದೆ. ಹೀಗೆ ಕಥೆ ತ್ರಿಕೋನ ರೂಪದಲ್ಲಿ ಸಾಗುತ್ತದೆ. ಅಂತಿಮದಲ್ಲಿ ಯಾರ ಪ್ರೀತಿ ಗೆದ್ದಿತು ಎಂಬ ಕುತೂಹಲವನ್ನು ನಾಟಕದುದ್ದಕ್ಕೂ ಕೆರಳಿಸುತ್ತಾ ಸಾಗುವ ಈ ನಾಟಕ ಮನುಷ್ಯ ಸಂಬಂಧಗಳ ವಿವಿಧ ಮಜಲುಗಳನ್ನು ತೆರೆದಿಡುತ್ತಾ ಸಾಗುತ್ತದೆ. ಅನುವಾದಕರಾದ ಡಾ. ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಅವರು ಬಹಳ ಯಶಸ್ವಿಯಾಗಿ ನಾಟಕವನ್ನು ಕನ್ನಡಕ್ಕೆ ತಂದಿದ್ದಾರೆ.
























