ರಾಕ್ಷಸಿ ಹಿಡಿಂಬೆ ತನ್ನ ಉಪವಾಸವನ್ನು ಅಂತ್ಯ ಮಾಡಲು,ಊಟಕ್ಕಾಗಿ ಮನುಷ್ಯನೊಬ್ಬನನ್ನು ಹಿಡಿದುಕೊಂಡು ಬರುವಂತೆ ಮಗನಾದ ಘಟೋತ್ಕಚನಿಗೆ ಅಪ್ಪಣೆ ಮಾಡಿರುತ್ತಾಳೆ. ಕೇಶವದಾಸನೆಂಬ ಬ್ರಾಹ್ಮಣನೊಬ್ಬ ತನ್ನ ಹೆಂಡತಿ ಮತ್ತು ಮೂವರು ಮಕ್ಕಳೊಡನೆ ಸೋದರಮಾವನ ಮಗನ ಉಪನಯನಕ್ಕಾಗಿ ಹೊರಟಿರುತ್ತಾರೆ. ಅವರು ಕಾಡಿನಲ್ಲಿ ಸಾಗುವಾಗ ಘಟೋತ್ಕಚ ಈ ಕುಟುಂಬವನ್ನು ಸೆರೆ ಹಿಡಿಯುತ್ತಾನೆ. ವೃದ್ಧ, ಬ್ರಾಹ್ಮಣಿ ಮತ್ತು ಮೂವರು ಮಕ್ಕಳು ಘಟೋತ್ಕಚನೊಂದಿಗೆ ಹೋಗಲು ಪರಸ್ಪರ ಚರ್ಚೆ ಮಾಡುತ್ತಾರೆ. ಕುಟುಂಬವನ್ನು ರಕ್ಷಿಸಲು ಮುದುಕನಾಗಿರುವ ತಾನೇ ಹೋಗುವುದಾಗಿ ವೃದ್ಧ ಹೇಳುತ್ತಾನೆ. ಆದರೆ ಪತಿಯೇ ತನಗೆ ಸರ್ವಸ್ವ, ಹೀಗಾಗಿ ನಾನು ಹೋಗಬೇಕೆಂದು ಬ್ರಾಹ್ಮಣಿ ಪ್ರತಿಭಟಿಸುತ್ತಾಳೆ. ಮತ್ತೊಂದು ಕಡೆ ಮೂವರು ಮಕ್ಕಳು ಕುಟುಂಬವನ್ನು ಉಳಿಸಲು ತಮ್ಮ ಪ್ರಾಣವನ್ನು ಕೊಡುವುದಾಗಿ ಹೇಳುತ್ತಾರೆ. ಆದರೆ ಜೇಷ್ಠ ಪುತ್ರನನ್ನು ಕಳಿಸಲು ವೃದ್ಧ ಒಪ್ಪುವುದಿಲ್ಲ, ಅತ್ಯಂತ ಪ್ರೀತಿಪಾತ್ರನಾದ ಕೊನೆಯ ಮಗನನ್ನು ಕಳಿಸಲು ಬ್ರಾಹ್ಮಣಿ ಒಪ್ಪುವುದಿಲ್ಲ. ಕೊನೆಗೆ ಉಳಿದವನು ಮಧ್ಯಮ. ಆತ ತನ್ನ ಪ್ರಾಣ ನೀಡಿ ಕುಟುಂಬದ ರಕ್ಷಣೆ ಮಾಡಲು ಮುಂದಾಗುತ್ತಾನೆ. ಅದಕ್ಕೂ ಮುನ್ನ ಸರೋವರದಲ್ಲಿ ಬಾಯಾರಿಕೆ ನೀಗಿಸಿಕೊಂಡು ಬರುವುದಾಗಿ ತಿಳಿಸಿ ಹೊರಡುತ್ತಾನೆ. ಎಷ್ಟು ಹೊತ್ತಾದರೂ ಆತ ಹಿಂದಿರುಗದಿದ್ದಾಗ ಘಟೋತ್ಕಚ ಮಧ್ಯಮಾ... ಮಧ್ಯಮಾ.. ಎಂದು ಕೂಗುತ್ತಾನೆ. ಈ ವೇಳೆ ಅದೇ ಕಾಡಿನಲ್ಲಿ ವ್ಯಾಯಾಮ ಮಾಡುತ್ತಿದ್ದ ಭೀಮ ಈ ದನಿಯನ್ನು ಆಲಿಸುತ್ತಾನೆ. ಮೊದಲ ಮೂವರು ಪಾಂಡವರಲ್ಲಿ ಭೀಮನೂ ಮಧ್ಯಮನೇ. ಹೀಗಾಗಿ ಯಾರೋ ತನ್ನನ್ನು ಕರೆಯುತ್ತಿದ್ದಾರೆಂದು ಭೀಮ ಬರುತ್ತಾನೆ. ಬಳಿಕ ಘಟೋತ್ಕಚನಿಂದ ಬ್ರಾಹ್ಮಣ ಕುಟುಂಬವನ್ನು ಪಾರು ಮಾಡಲು ಭೀಮ ಮುಂದಾಗುತ್ತಾನೆ. ಘಟೋತ್ಕಚ ಭೀಮನ ನಡುವೆ ಯುದ್ಧ ನಡೆಯುತ್ತದೆ. ಭೀಮನನ್ನು ತಾಯಿಯ ಬಳಿ ಕರೆದುಕೊಂಡು ಹೋದ ಬಳಿಕ ಘಟೋತ್ಕಚನಿಗೆ ತಾನು ಹಿಡಿದು ತಂದಿರುವುದು ತನ್ನ ತಂದೆಯಾದ ಭೀಮನನ್ನೇ ಎಂಬ ವಿಷಯ ತಿಳಿಯುತ್ತದೆ. ಬಳಿಕ ಮೂವರ ಸಮ್ಮಿಲನದೊಂದಿಗೆ ನಾಟಕ ಅಂತ್ಯವಾಗುತ್ತದೆ.
