ಮಂಟೇಸ್ವಾಮಿ ಸ್ವಯಂಭೂ ಪರಂಜ್ಯೋತಿ ಮತ್ತು ಸಕಲ ಸೃಷ್ಟಿಕಾರಣ. ಒಮ್ಮೆ ಕಲ್ಯಾಣದಲ್ಲಿದ್ದ ಅಪಾರ ಸಂಖ್ಯೆಯ ಶರಣರ ಧೃಢವನ್ನು ಪರೀಕ್ಷಿಸಲು ಅಲ್ಲಿಗೆ ಕುಷ್ಠರೋಗಿಯಂತೆ ತೆರಳಿ ಅವರಿಗೆ ಪರೀಕ್ಷೆಯನ್ನು ಒಡ್ಡಿ ಅವರ ಹುಸಿಯನ್ನು ಬಯಲು ಮಾಡುತ್ತಾನೆ. ಅಲ್ಲಿಯೇ ರಾಚಪ್ಪಾಜಿ ಮಂಟೇಸ್ವಾಮಿಯ ಮೊದಲ ಶಿಷ್ಕನಾಗುತ್ತಾನೆ. ನಂತರ ದೊಡ್ಡಮ್ಮ ಸಿದ್ದಪ್ಪಾಜಿ ಇತ್ಯಾದಿ ಅನೇಕ ಶಿಷ್ಯರನ್ನು ಪಡೆದು ಅಂದು ಪ್ರಬಲರಾಗಿದ್ದ ಮತ್ತು ತನ್ನ ಪಂಥವನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಪಾ೦ಚಾಳರನ್ನು ಸಿದ್ದಪ್ಪಾಜಿಯ ಮೂಲಕ ಗೆದ್ದು ಅವರಿಂದ ಕಬ್ಬಿಣ ಭಿಕ್ಷೆಯನ್ನು ಪಡೆದು ಅವರನ್ನು ತನ್ನ ಪಂಥಕ್ಕೆ ಸೇರಿಸಿಕೊಳ್ಳುತ್ತಾನೆ. ಕೊನೆಗೆ ಬರಲಿರುವ ಕಲಿಯ ಪ್ರಾಬಲ್ಯವನ್ನು ನೋಡಲಿಚ್ಛಿಸದೆ ತನ್ನ ಸಕಲ ಬಿರುದುಗಳನ್ನು ಶಿಷ್ಯನಾದ ಸಿದ್ಧಪಾಜಿಗೆ ಕೊಟ್ಟು ಪಾತಾಳ ಪ್ರವೇಶ ಮಾಡುತ್ತಾನೆ. ಸಮಕಾಲೀನ ಮೌಲ್ಯಗಳಿಗೆ ಅನ್ವಯವಾಗಿರುವಂತೆ ರಚಿಸಿರುವ ನಾಟಕದ ಕೇ೦ದ್ರವ್ಯಕ್ತಿ ಬಸವಣ್ಣನ ಸಮಕಾಲೀನ ಎ೦ದು ನಂಬಲಾಗಿರುವ ಒಬ್ಬ ಅನುಭಾವಿ. ಸಮಾಜದೆಲ್ಲೆಡೆ ತುಂಬಿರುವ ಮೂಢನಂಬಿಕೆ ಜಾತೀಯತೆ ಸಾಮಾಜಿಕ ಅಸಮಾನತೆಗಳನ್ನು ವಿರೋಧಿಸುವ ಮಂಟೇಸ್ವಾಮಿ ಮತ್ತು ಸಿದ್ಧಪ್ಪಾಜಿ ಪಾತ್ರಗಳು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ.
