ನಾಟಕವು ಪ್ರಮುಖವಾಗಿ ಬಾಣಾಸುರನ ಮಗಳಾದ ಉಷೆ ಮತ್ತು ಶ್ರೀಕೃಷ್ಣನ ಮೊಮ್ಮಗನಾದ ಅನಿರುದ್ಧನ ಪ್ರೇಮಕಥೆಯನ್ನು ಆಧರಿಸಿದೆ. ಶೋಣಿತಪುರದ ಅರಸನಾದ ಬಾಣಾಸುರನು ಶಿವನ ವರದಿಂದ ಸಾವಿರ ಬಾಹುಗಳನ್ನು ಹೊಂದಿರಿತ್ತಾನೆ. ಇದರಿಂದ ಅವಾನ ಅಹಂಕಾರ ಹೆಚ್ಚುತ್ತದೆ. ಅವನ ಮಗಳು ಉಷೆ ಒಂದು ರಾತ್ರಿ ಕನಸಿನಲ್ಲಿ ಒಬ್ಬ ಸುಂದರ ರಾಜಕುಮಾರನನ್ನು ಕಂಡು ಅವನ ಮೇಲೆಮೋಹಗೊಳ್ಳುತ್ತಾಳೆ. ಎಚ್ಚರವಾದಾಗ ಆತ ಕಾಣದಿದ್ದಾಗ ವಿರಹ ವೇದನೆಯನ್ನು ಅನುಭವಿಸುತ್ತಾಳೆ. ಅವಳ ಸಖಿ ಮತ್ತು ಚಿತ್ರಗಾರ್ತಿಯಾದ ಚಿತ್ರಲೇಖೆ, ಉಷೆಯ ವರ್ಣನೆಯ ಆಧಾರದ ಮೇಲೆ ಪ್ರಪಂಚದ ಎಲ್ಲಾ ಸುಂದರ ರಾಜಕುಮಾರರ ಚಿತ್ರಗಳನ್ನು ಬಿಡಿಸುತ್ತಾಳೆ. ಕೊನೆಗೆ ಉಷೆಯು ದ್ವಾರಕೆಯ ಶ್ರೀಕೃಷ್ಣನ ಮೊಮ್ಮಗನಾದ ಅನಿರುದ್ಧನ ಚಿತ್ರವನ್ನು ನೋಡಿ ಇವನೇ ತನ್ನ ಕನಸಿನ ರಾಜಕುಮಾರ ಎಂದು ಗುರುತಿಸುತ್ತಾಳೆ. ಕೂಡಲೇ ಚಿತ್ರಲೇಖೆ ತನ್ನ ಮಾಂತ್ರಿಕ ಶಕ್ತಿಯಿಂದ ದ್ವಾರಕೆಗೆ ತೆರಳಿ, ನಿದ್ರಿಸುತ್ತಿದ್ದ ಅನಿರುದ್ಧನನ್ನು ಗೊಂಬೆಯ ರೂಪದಲ್ಲಿ ಸೆರೆಹಿಡಿದು ಉಷೆಯ ಅಂತರಪುರಕ್ಕೆ ಹೊತ್ತು ತರುತ್ತಾಳೆ.ಅಲ್ಲಿ ಉಷೆ ಮತ್ತು ಅನಿರುದ್ಧರು ಒಬ್ಬರನ್ನೊಬ್ಬರು ಕಂಡು ಪ್ರೀತಿಸಿ, ಗಾಂಧರ್ವ ವಿವಾಹ ಮಾಡಿಕೊಳ್ಳುತ್ತಾರೆ.. ಆದರೆ ಈ ವಿಷಯ ತಿಳಿದ ಬಾಣಾಸುರನು ಅತ್ಯಂತ ಕೋಪಗೊಂಡು ಅಂತರಪುರಕ್ಕೆ ನುಗ್ಗುತ್ತಾನೆ. ಅನಿರುದ್ಧನು ತಾನು ಶ್ರೀಕೃಷ್ಣನ ಮೊಮ್ಮಗನೆಂದು ಹೆಮ್ಮೆಯಿಂದ ಹೇಳಿಕೊಂಡರೂ, ಬಾಣಾಸುರನು ಅವನನ್ನು ನಾಗಪಾಶದಿಂದ ಬಂಧಿಸಿ ಕತ್ತಲ ಕೋಣೆಯಲ್ಲಿ ಸೆರೆಯಿಡುತ್ತಾನೆ. ಉಷೆಯನ್ನೂ ಸಹ ಅವಳ ಅಂತರಪುರದಲ್ಲೇ ಬಂಧಿಸಲಾಗುತ್ತದೆ. ನಾರದ ಮುನಿಗಳ ಮೂಲಕ ಅನಿರುದ್ಧನ ಬಂಧನದ ಸುದ್ದಿ ದ್ವಾರಕೆಯನ್ನು ತಲುಪುತ್ತದೆ. ಶ್ರೀಕೃಷ್ಣ ಮತ್ತು ಬಲರಾಮರು ಬೃಹತ್ ಯಾದವ ಸೈನ್ಯದೊಂದಿಗೆ ಶೋಣಿತಪುರದ ಮೇಲೆ ದಾಳಿ ಮಾಡುತ್ತಾರೆ. ಬಾಣಾಸುರನ ರಕ್ಷಣೆಗಾಗಿ ಅವನ ಆರಾಧ್ಯ ದೈವವಾದ ಶಿವನು ತನ್ನ ರುದ್ರಗಣಗಳೊಂದಿಗೆ ಯುದ್ಧಕ್ಕೆ ಬರುತ್ತಾನೆ.
ಇದು ಕೇವಲ ಇಬ್ಬರು ರಾಜರ ನಡುವಿನ ಯುದ್ಧವಾಗದೆ, ಹರಿ (ಕೃಷ್ಣ) ಮತ್ತು ಹರ (ಶಿವ) ನಡುವಿನ ಭೀಕರ ಕಾಳಗವಾಗಿ ಮಾರ್ಪಡುತ್ತದೆ. ಶಿವನು 'ಶಿವಜ್ವರ'ವನ್ನು ಪ್ರಯೋಗಿಸಿದರೆ, ಕೃಷ್ಣನು ಅದಕ್ಕೆ ಪ್ರತಿಯಾಗಿ 'ವಿಷ್ಣುಜ್ವರ'ವನ್ನು ಪ್ರಯೋಗಿಸುತ್ತಾನೆ. ಕೊನೆಗೆ ಕೃಷ್ಣನು ಸುದರ್ಶನ ಚಕ್ರವನ್ನು ಪ್ರಯೋಗಿಸಿ ಬಾಣಾಸುರನ ಸಾವಿರ ತೋಳುಗಳನ್ನು ಕತ್ತರಿಸುತ್ತಾನೆ. ಶಿವನ ಕೋರಿಕೆಯಂತೆ ಕೃಷ್ಣನು ಬಾಣಾಸುರನ ಪ್ರಾಣವನ್ನು ಉಳಿಸಿ, ಅವನ ಅಹಂಕಾರದ ಸಂಕೇತವಾಗಿದ್ದ ಸಾವಿರ ತೋಳುಗಳಲ್ಲಿ ಕೇವಲ ನಾಲ್ಕು ತೋಳುಗಳನ್ನು ಮಾತ್ರ ಉಳಿಸುತ್ತಾನೆ. ತನ್ನ ತಪ್ಪನ್ನು ಅರಿತ ಬಾಣಾಸುರನು ಅಹಂಕಾರ ಬಿಟ್ಟು ಶ್ರೀಕೃಷ್ಣ ಮತ್ತು ಶಿವನಿಗೆ ಶರಣಾಗುತ್ತಾನೆ. ಅಂತಿಮವಾಗಿ ಉಷೆ ಮತ್ತು ಅನಿರುದ್ಧರ ವಿವಾಹವನ್ನು ಬಾಣಾಸುರನು ಹರಸಿ ನೆರವೇರಿಸುತ್ತಾನೆ.
























